ಯಾವಾಗಲೂ ಖುಷಿ ಖುಷಿಯಾಗಿ ಇರಬೇಕೆಂಬ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ಆದರೆ ಮನಸ್ಸು ಕೇಳಬೇಕಲ್ಲ! ಮನಸ್ಸೇ ಹಾಗೇ ಗತ ಕಾಲದಲ್ಲಿ ಕಳೆದು ಹೋಗಿರುವ ಯಾವುದೋ ಕೆಟ್ಟ ನೆನಪನ್ನು ಮತ್ತು ಅಗೋಚರವಾಗಿರುವ ನಾಳೆಗಳ ಬಗ್ಗೆ ಚಿಂತಿಸುವುದನ್ನು ಈ ಮನಸ್ಸು ರೂಡಿಮಾಡಿಕೊಂಡು ಈ ದಿನದ ಈ ಕ್ಷಣದ ಸಂತಸದ ಬದುಕನ್ನು ತಿಂದುಬಿಡುತ್ತದೆ. ನಮ್ಮ ಮನಸ್ಸನ್ನು ನಿಯಂತ್ರಿಸಿ ಈ ಕ್ಷಣದ ಬದುಕಿಗೆ ಹೊಂದಿಕೊಂಡು ಹೊಗುವುದನ್ನು ರೂಡಿಸಿಕೊಳ್ಳಬೇಕು. ಬದುಕು ಖುಷಿ ಖುಷಿಯಾಗಿರಲು ಸಾವಿರ ಸಾವಿರ ಅವಕಾಶಗಳನ್ನು ನಮಗೆ ಕೊಡುತ್ತದೆ. ಅದನ್ನು ನಾವು ಸ್ವೀಕರಿಸಲು ಸಿದ್ದರಿರಬೇಕು.
ಪ್ರತಿ ದಿನ ಹಾಸಿಗೆಯಿಂದ ಹೇಳುವಾಗ ಎಲ್ಲರೂ ಏಕೆ ಬೆಳಕಾಯಿತೋ ಎಂಬಂತೆ ಹೇಳುತ್ತೆವೆ. ಗುರಿಗಳಿರದೆ ಪ್ರತಿ ದಿನವನ್ನೂ ಸುಖ ಸುಮ್ಮನೆ ಕಳೆದು ಬಿಡುತ್ತೇವೆ. ಈ ಸಮಯ ನಮಗೆ ಗೊತ್ತಿಲ್ಲದೆ ಕೈ ಬೆರಳುಗಳ ನಡುವ ಜಾರಿ ಹೋಗುವ ಮರಳಿನ ಕಣದಂತೆ ಸರಿಯುತ್ತಿರುತ್ತದೆ. ಹಾಸಿಗೆಯಿಂದ ಹೇಳುವಾಗಲೇ ನಮ್ಮ ಮನಸ್ಸಿಗೆ ನಾವೇ ಹೇಳಿಕೊಳ್ಳಬೇಕು ಬದುಕು ಮತ್ತೊಂದು ಸುಂದರ ದಿನವನ್ನು ನಮಗೆ ನೀಡಿದೆ ಈ ದಿನವನ್ನು ನಾನು ಸಾದ್ಯವಾದಷ್ಟೂ ಖುಷಿ ಖುಷಿಯಿಂದ ಕಳೆಯಬೇಕು. ರಾತ್ರಿಯ ಹೊತ್ತಿಗೆ ಒಂದು ತೃಪ್ತಿಯ ಭಾವ ಆವರಿಸುವ ಹಾಗೆ ಕಳೆಯಬೇಕಂದು ನಿರ್ಧರಿಸಿ. ದಿನವನ್ನು ಪ್ರಾರಂಭಿಸಬೇಕು. ಬದುಕನ್ನು ಪ್ರೀತಿಸಿ ಹೊಸ ವಿಷಯಗಳನ್ನು ಕಲಿಯುವ ಆಶಯದೊಂದಿಗೆ ನಿರ್ಮಲ ಭಾವದೊಂದಿಗೆ ನಿಮ್ಮ ದಿನ ಆರಂಭಿಸಿ ನಿಮಗೆ ಗೊತ್ತಿಲ್ಲದೆ ನೀವು ಸಮಾಧಾನದ ಸಂತೃಪ್ತಿಯನ್ನು ಹೊಂದುತ್ತೀರಿ.
ಖುಷಿ ಅಂದ ಕ್ಷಣ ಅದು ನಮ್ಮ ಮನಸ್ಸಿನಲ್ಲಿ ಮೂಡುವ ಮಧುರವಾದ ಭಾವನೆ, ಅದನ್ನು ಬೇರೆಯವರಿಂದ ನಿರೀಕ್ಷಿಸಬಾರದು. ಕಳೆದ ನಿನ್ನೆಗಳು ನಮಗೆ ಯಾವತ್ತಿಗೂ ಸಿಗುವುದಿಲ್ಲ ಆದರೆ ಇರುವ ಈ ದಿನ ಬರುವ ನಾಳೆಗಳು ಮಾತ್ರ ನಮಗೆ ಎದರುರಾಗುತ್ತವೆ. ಈ ವಾಸ್ತವವನ್ನೂ ಎಲ್ಲರೂ ಅರ್ಥಮಾಡಿಕೊಂಡು ಇವತ್ತಿನ ಕ್ಷಣಗಳನ್ನು ಸುಮಧುರವಾಗಿ ಕಳೆಯಬೇಕು ಇಲ್ಲದಿದ್ದರೆ ಇವತ್ತಿನ ದಿನಗಳು ಮುಂದೆ ಗತಿಸಿದ ಕೆಟ್ಟದಿನಗಳಾಗಿ ಮತ್ತೆ ನಿಮ್ಮನ್ನು ಕಾಡುತ್ತವೆ. ನಿಮ್ಮ ಖುಷಿ ನಿಮ್ಮ ಕೈಯಲ್ಲೇ ಇದೆ ಅದನ್ನು ಮತ್ಯಾರಿಂದಲೋ ನಿರೀಕ್ಷಿಸುತ್ತಾ ಸಮಯ ಕಳೆಯಬೇಡಿ. ನಾಳೆಯ ಬಗ್ಗೆ ಚಿಂತೆಗಿಂತ ಇವತ್ತಿನ ಈ ಕ್ಷಣದ ಬದುಕು ಬಹಳ ಮುಖ್ಯ. ಬದುಕಿಗಾಗಿ ದುಡಿಯಬೇಕೇ ವಿನ: ಬದುಕೇ ದುಡಿಮೆಯಾಗಿರಬಾರದು! ಕುಟುಂಬದವರೊಡನೆ ಕಳೆಯುವ ಪ್ರತಿ ಕ್ಷಣವೂ ಅತ್ಯಮೂಲ್ಯ! ಸ್ವಾರ್ಥದ ಬದುಕಿಗಿಂತ ಸಮಾಜಮುಖಿ ಬದುಕು ನಿಮ್ಮನ್ನು ಮತ್ತಷ್ಟು ಆರೋಗ್ಯವಂತರನ್ನಾಗಿಸುತ್ತದೆ. ಪ್ರತಿ ಕ್ಷಣವೂ ನಿಮ್ಮದೆ ಖುಷಿಯಾಗಿರಿ, ನೀವು ಖುಷಿಯಾಗಿದ್ದರೆ ನಿಮ್ಮ ಕುಟುಂಬ ಮತ್ತು ಸ್ನೇಹಿತರು ನಿಮ್ಮ ಜೊತೆ ಖುಷಿ ಖುಷಿಯಾಗಿ ಇರುತ್ತಾರೆ. ಏನಂತೀರಾ?
-ನವೀನ್ ರಾಮನಗರ
ಚಿತ್ರಕೃಪೆ: ಅಂತರ್ಜಾಲ