ಕೆಎಂಎಫ್ ಸೇರಿದಂತೆ ಪಾಂಡವಪುರ ಸಕ್ಕರೆ ಕಾರ್ಖಾನೆ, ಕೆಂಪೇಗೌಡ ಬಸ್ ನಿಲ್ದಾಣ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಬಿ.ಎಸ್. ಮುದ್ದಪ್ಪನವರು ನಿನ್ನೆ ತಮ್ಮ ಬೆಂಗಳೂರಿನ ನಿವಾಸದಲ್ಲಿ ನಿಧನರಾದರು. ಇವರಿಗೆ 99 ವರ್ಷ ವಯಸ್ಸಾಗಿತ್ತು.
ಮೂಲತ: ಕೆಆರ್ ನಗರದ ಬಳೆ ಸಿದ್ದಲಿಂಗಶೆಟ್ಟಿ ಪುತ್ರರಾದ ಮುದ್ದಪ್ಪ ಅವರು ಪದವಿ ನಂತರ ಕಾನೂನು ಪದವಿ ಪಡೆದು ನಂತರ ಐಎಎಸ್ ಪಾಸಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅನೇಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು.
ಈಗಿನ ಕೆಎಂಎಫ್ ಹಿಂದೆ ಕೆಡಿಡಿಸಿ ಆಗಿದ್ದ ಕಾಲದಲ್ಲಿ ಪ್ರಥಮ ವ್ಯವಸ್ಥಾಪಕ ನಿರ್ದೇಶಕರಾಗಿ/ಅಧ್ಯಕ್ಷರಾಗಿ ಹೈನೋದ್ಯಮವನ್ನು ಕರ್ನಾಟಕದಲ್ಲಿ ಮುಂಚೂಣಿಗೆ ತಂದ ಕೀರ್ತಿ ಶ್ರೀಯುತರಿಗೆ ಸಲ್ಲುತ್ತದೆ. ಇವರು ಎಂ.ಡಿ ಆಗಿದ್ದ ಅವಧಿಯಲ್ಲಿ ವರ್ಡ್ ಬ್ಯಾಂಕ್ ನಿಂದ ಸಾಲತಂದೂ ಚನ್ನಶೇಖರಪ್ಪ, ಚನ್ನೇಗೌಡ, ಕುಟ್ನಿಕರ್, ದಯಾನಂದ್ ಎಂಬ ದಕ್ಷ ಅಧಿಕಾರಿಗಳ 4 ತಂಡ ಕಟ್ಟಿ, ಅವರ ಕೆಳಗೆ ಅಧಿಕಾರಿ/ಸಿಬ್ಬಂದಿಗಳನ್ನು ನೇಮಿಸಿ ಹೈನೋದ್ಯಮದ ದೀವಿಗೆ ರಾಜ್ಯದಲ್ಲಿ ನಿರಂತರವಾಗಿ ಬೆಳಗಲು ಶ್ರಮಿಸಿದ್ದರು.
ಕೆಎಂಎಫ್ ಕಲಾವೇದಿಕೆ 2012ರಲ್ಲಿ ಜೆಎಸ್ಎಸ್ ಸಭಾಂಗಣದ್ಲಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಂದಿನ ಎಂ.ಡಿಯಾಗಿದ್ದ ಶ್ರೀ ಎ.ಎಸ್. ಪ್ರೇಮ್ನಾಥ್ರವರು ಬಿ.ಎಸ್. ಮುದ್ದಪ್ಪರವರನ್ನು ಅತಿಥಿಯಾಗಿ ಆಹ್ವಾನಿಸಿ ಕೆಎಂಎಫ್ ಪರವಾಗಿ ಗೌರವಿಸಿ ಸನ್ಮಾನ ಮಾಡಿದ್ದರು. ಈ ಸಂದರ್ಭದಲ್ಲಿ ಬಿ.ಎಸ್. ಮುದ್ದಪ್ಪನವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದರು.

ಬಿ.ಎಸ್. ಮುದ್ದಪ್ಪನವರ ನಿಧನಕ್ಕೆ ಕೆಎಂಎಫ್ ಅಧ್ಯಕ್ಷರಾದ ಶ್ರೀ ಬಾಲಚಂದ್ರ ಲ ಜಾರಕಿಹೊಳಿ ಮತ್ತು ಆಡಳಿತ ಮಂಡಲಿ ಸದಸ್ಯರು ಹಾಗೂ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಬಿ.ಸಿ. ಸತೀಶ್ ರವರು, ಕೆಎಂಎಫ್ ಅಧಿಕಾರಿ/ಸಿಬ್ಬಂದಿ ವರ್ಗ ಸಂತಾಪ ಸೂಚಿಸಿದ್ದಾರೆ.
ಬರಹ-ನವೀನ್ ರಾಮನಗರ
ಮಾಹಿತಿ-ಬಿ.ವಿಶ್ವನಾಥ್, ನಿವೃತ್ತ ಕೆಎಂಎಫ್ ಅಧಿಕಾರಿ