ಅತಿಥಿ ಅಂಕಣ

ಅಪಶಬ್ದಗಳಿಗೆ ಉತ್ತರವೆಲ್ಲಿದೆ ಗೊತ್ತಾ ? ಓದಿ

ಸಾಮಾನ್ಯವಾಗಿ ಹೊಸತೊಂದು ಧರ್ಮದ ಪ್ರಚಾರ ಹೆಚ್ಚಾಗಿ, ಜನಪ್ರಿಯತೆ ಹೆಚ್ಚಿದಾಗ, ಅದರ ಆಕರ್ಷಣೆಗೊಳಗಾಗಿ ಅನೇಕರು ‘ಮತಾಂತರ’ಕ್ಕೆ ಹೊರಡುವುದುಂಟು. ಬಹಳಷ್ಟು ಜನರು ಧರ್ಮದ ತತ್ವ-ಸಿದ್ಧಾಂತಗಳಿಗೆ ಮನ ಸೋತು ‘ಮತಾಂತರ’ಕ್ಕೊಳಗಾದರೆ, ಇನ್ನು ಕೆಲವರು ಲೌಕಿಕ ವ್ಯವಹಾರ, ಆರ್ಥಿಕ ಲಾಭ-ಇಲ್ಲವೇ ಯಾವುದಾದರೊಂದು ಸ್ವಾರ್ಥದಿಂದ ಪ್ರೇರಿತರಾಗಿ ‘ಮತಾಂತರ’ ಹೊಂದುವವರೂ ಇರುತ್ತಾರೆ.

ಇಂತಹ ‘ಮತಾಂತರಿ’ಗಳನ್ನು ಕಂಡಾಗ ‘ಮತಾಂತರ’ವನ್ನು ಇಷ್ಟಪಡದೇ ಇರುವ ಹಠಮಾರಿಗಳೂ ಇದ್ದಾರೆ. ಅಂಥವರ ಮನಸ್ಸನ್ನು ತೊಳೆದು ಶುದ್ಧೀಕರಿಸುವ ವಿಧಾನದ ಮೂಲಕ ಜನಸಾಮಾನ್ಯರ ಹೃದಯವನ್ನು ಗೆದ್ದ ಗೌತಮ ಬುದ್ಧರ ನಿದರ್ಶನ ಅತ್ಯಂತ ಹೃದಯ ಸ್ಪರ್ಶಿಯಾಗಿದೆ.

ಭಾರದ್ವಾಜ ಎಂಬ ಒಬ್ಬ ಬ್ರಾಹ್ಮಣ-ವಿದ್ವಾಂಸನು ಗೌತಮ ಬುದ್ಧರ ಶಿಷ್ಯನಾಗಿ ದೀಕ್ಷೆ ಪಡೆದು ಬೌದ್ಧ ಸನ್ಯಾಸಿಯಾದನು. ಇದರಿಂದ ಆ ಬ್ರಾಹ್ಮಣ ವಿದ್ವಾಂಸನ ಬಂಧು ಬಾಂಧವರಿಗೆಲ್ಲ ಬಹಳ ದುಃಖವಾಯಿತು. ಅವರೆಲ್ಲರ ಪ್ರತಿನಿಧಿಯಾಗಿ ಮಹಾಪಂಡಿತನೊಬ್ಬನನ್ನು ಗೌತಮ ಬುದ್ಧರ ಬಳಿಗೆ ಕಳುಹಿಸಿಕೊಟ್ಟರು. ಆ ಮಹಾಪಂಡಿತನು ಗೌತಮ ಬುದ್ಧರ ಬಳಿಗೆ ಬಂದು ಸಿಕ್ಕಾಪಟ್ಟೆ ಬೈಯುತ್ತಾ, ಅಪಶಬ್ದಗಳನ್ನು ಪ್ರಯೋಗಿಸತೊಡಗಿದನು. ಗೌತಮ ಬುದ್ಧರು ಮೌನವಾಗಿದ್ದು, ಶಾಂತಿಯಿಂದ ಸಹನಶೀಲರಾಗಿ ಕುಳಿತಿದ್ದರು; ಉತ್ತರಿಸಲೇ ಇಲ್ಲ. ಬೈದು-ಬೈದು ಸುಸ್ತಾದ ಮಹಾಪಂಡಿತನೂ ಕೊನೆಗೆ ಸುಮ್ಮನಾದ.

ಆಗ ಗೌತಮ ಬುದ್ಧರು ಮಹಾಪಂಡಿತನನ್ನು ಹತ್ತಿರ ಕರೆದು ಕೇಳಿದರು- ‘ತಮ್ಮಾ, ನಿನ್ನ ಮನೆಗೆ ಆಗಾಗ್ಗೆ ಅತಿಥಿಗಳು ಬರುತ್ತಾರಷ್ಟೆ ! ಅವರಿಗೆ ಬಗೆ-ಬಗೆಯ ತಿಂಡಿ ತೀರ್ಥಗಳನ್ನು ಕೊಟ್ಟು ಉಪಚಾರ ಮಾಡುತ್ತೀಯಷ್ಟೆ ! ಆಕಸ್ಮತ್ತಾಗಿ ಅವುಗಳನ್ನು ಅವರು ಸ್ವೀಕಾರ ಮಾಡಲಿಲ್ಲವೆಂದಾದರೆ ಏನು ಮಾಡುತ್ತೀಯ?’ ಮಹಾಪಂಡಿತನು ಮತ್ತೆ ಸಿಟ್ಟಾಗಿ ಉತ್ತರಿಸಿದ- ‘ಸ್ವೀಕಾರ ಮಾಡಲಿಲ್ಲವೆಂದಾದರೆ ಅವರಿಗೆ ತಿನ್ನುವ ಯೋಗವಿಲ್ಲವೆಂದು ಮನೆಯವರೇ ತಿನ್ನುತ್ತೇವೆ.’

ಆಗ ಗೌತಮ ಬುದ್ಧರು ಮತ್ತಷ್ಟು ತಾಳ್ಮೆಯಿಂದ ನುಡಿದರು- ‘ಬಹಳಷ್ಟು ಹೊತ್ತಿನಿಂದ ಸಾಕಷ್ಟು ಅಪಶಬ್ದಗಳನ್ನು ಹೇಳಿದ ಬಳಿಕ ಬೈದು-ಬೈದು ಸುಸ್ತಾಗಿ ನೀನೇ ನಿಲ್ಲಿಸಿದೆ. ನಿನ್ನ ಕೆಟ್ಟ-ಉಪಚಾರಗಳೊಂದನ್ನು ನಾನು ಸ್ವೀಕಾರ ಮಾಡಲೇ ಇಲ್ಲ. ಇವು ಈಗ ನಿನ್ನ ಪಾಲಿಗೇ ಉಳಿದಿವೆ !’

ಮಹಾಪಂಡಿತನಿಗೆ ಜ್ಞಾನೋದಯವಾಯಿತು. ನಾಚಿಕೆಯಿಂದ ತಲೆಬಾಗಿದ. ಗೌತಮ ಬುದ್ಧರಿಗೆ ಚರಣ ಸ್ಪರ್ಶ ಮಾಡಿ, ಕ್ಷಮೆ ಯಾಚನೆ ಮಾಡಿ ತಾನೂ ಶಿಷ್ಯನಾಗಿ ಹೊರಟು ಹೋದ.ಕ್ರೋಧದ ಆವೇಶದಲ್ಲಿ ಇತರರನ್ನು ಬೈದಾಗ ಅವರೂ ಕುಪಿತರಾಗಿ ಬೈಯತೊಡಗಿದರೆ, ಜಗಳ ಜೋರಾಗುತ್ತದೆ. ಮಾತಿನ ಜಗಳ ದೈಹಿಕ-ಜಗಳಕ್ಕೆ, ಹಿಂಸೆಗೆ ಕಾರಣವಾಗಲೂಬಹುದು. ಆದರೆ ಮಹಾತ್ಮರು ನಡೆವ ದಾರಿಯು ವಿಭಿನ್ನವಾಗಿರುತ್ತದೆ.

ಅವರು ಕ್ರೋಧವೆಂಬ ಬೆಂಕಿಯನ್ನು ತಾಳ್ಮೆಯಿಂದ, ಮೌನವೆಂಬ ತಣ್ಣೀರಿನಿಂದ ಉಪಶಮನಗೊಳಿಸುವ ಕಲೆಯಲ್ಲಿ ನಿಷ್ಣಾತರಾಗಿರುತ್ತಾರೆ. ದಯೆ, ಶಾಂತಿ, ಅಹಿಂಸೆ-ಕಾರುಣ್ಯಗಳಂಥ ಉನ್ನತಾದರ್ಶಗಳಿಂದಾಗಿಯೇ ಗೌತಮ ಬುದ್ಧರು ವಿಶ್ವಪೂಜ್ಯರೆನಿಸಿದರು ಹಾಗೂ ಬೌದ್ಧ ಧರ್ಮವು ವಿಶ್ವವ್ಯಾಪಿಯಾಗಿ ಪ್ರಸಾರವಾಯಿತು.

ಕೃಪೆ:ಡಿ.ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ

About the author

bbmadmin

Leave a Comment

Facebook Like Box

ಮಿಸ್ ಮಾಡದೆ ಓದಿ

ವಿಡಿಯೋ

Copyright © 2020 BBMNAVEEN2012.COM All Rights Reserved. Design and Developed By Vinyas Infotech

error: Content is protected !!